ರಾಜ್ಯ

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಸರ್ಕಾರದ ಮೊದಲ ಬಜೆಟ್ ಮಂಡನೆ: ಜನಪ್ರಿಯ ಯೋಜನೆಗಳ ಮಹಾಪೂರ!

Spread the love

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿ ಮುಖ್ಯಮಂತ್ರಿ ಗದ್ದುಗೆಗೇರಿರುವ ದಳಪತಿ ವಿಜಯ್ ಈಗ ನಿಜವಾದ ಅರ್ಥದಲ್ಲಿ ‘ಜನ ನಾಯಗನ್’ ಆಗಿ ಹೊರಹೊಮ್ಮಿದ್ದಾರೆ. ನಟ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳನ್ ವೆಟ್ರಿ ಕಳಗಂ (TVK) ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಅವರು ಬುಧವಾರ (ಆಗಸ್ಟ್ 5) ವಿಧಾನಸಭೆಯಲ್ಲಿ ಮಂಡಿಸಿದರು.

ತಮ್ಮ ಬಹುನಿರೀಕ್ಷಿತ ಕೊನೆಯ ಸಿನಿಮಾದಲ್ಲಿ ‘ಜನ ನಾಯಗನ್’ (ಜನರ ನಾಯಕ) ಆಗಿ ಮಿಂಚಿದ್ದ ವಿಜಯ್, ಇದೀಗ ಆಡಳಿತದಲ್ಲೂ ಜನಪರ ಯೋಜನೆಗಳನ್ನು ಘೋಷಿಸುವ ಮೂಲಕ ರಿಯಲ್ ಲೈಫ್‌ನಲ್ಲೂ ತಾವು ‘ಜನ ನಾಯಗನ್’ ಎಂಬುದನ್ನು ಸಾಬೀತುಪಡಿಸಿದ್ದಾರೆ. 2026-27ನೇ ಸಾಲಿನ ಈ ಬಜೆಟ್‌ನಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಬಜೆಟ್‌ನ ಪ್ರಮುಖ ಮುಖ್ಯಾಂಶಗಳು:

  • ಮಹಿಳೆಯರಿಗೆ ಚಿನ್ನದ ನಾಣ್ಯ: ವಿವಾಹದ ಸಮಯದಲ್ಲಿ ವಧುವಿಗೆ 8 ಗ್ರಾಂ ಚಿನ್ನದ ನಾಣ್ಯ ಹಾಗೂ ರೇಷ್ಮೆ ಸೀರೆ ನೀಡುವ ಯೋಜನೆ ಘೋಷಿಸಲಾಗಿದ್ದು, ಇದಕ್ಕಾಗಿ 812 ಕೋಟಿ ರೂ. ಮೀಸಲಿಡಲಾಗಿದೆ.
  • ತಾಯ್ ಮಾಮನ್ ತಂಗ ಮೋದಿರ ಯೋಜನೆ: ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಮಕ್ಕಳಿಗೆ 1 ಗ್ರಾಂ ಚಿನ್ನದ ಉಂಗುರ ನೀಡಲು 560 ಕೋಟಿ ರೂ. ಅನುದಾನ ಒದಗಿಸಲಾಗಿದೆ.
  • ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ಮತ್ತು ಸೈಕಲ್: ‘ವೆಟ್ರಿ ಮಡಿಕಣಿನಿ’ ಯೋಜನೆ ಅಡಿ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಗೆ 2,000 ಕೋಟಿ ರೂ. ಮೀಸಲಿಡಲಾಗಿದೆ. ಹಾಗೆಯೇ, ಶಾಲಾ ವಿದ್ಯಾರ್ಥಿಗಳಿಗೆ ಸೈಕಲ್, ಹೆಲ್ಮೆಟ್ ಹಾಗೂ ವಾಟರ್ ಬಾಟಲ್ ನೀಡಲು 777 ಕೋಟಿ ರೂ. ಮೀಸಲಿಡಲಾಗಿದೆ.
  • ಬೃಹತ್ ಆರ್ಥಿಕತೆಯ ಗುರಿ: 2036ರ ವೇಳೆಗೆ ತಮಿಳುನಾಡನ್ನು 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹಣಕಾಸು ಸಚಿವರು ಮುಂದಿಟ್ಟಿದ್ದಾರೆ.

ಸಿಎಂ ವಿಜಯ್ ಅವರ ಸರ್ಕಾರದ ಈ ಚೊಚ್ಚಲ ಬಜೆಟ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದ್ದು, ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಇದು ದಿಟ್ಟ ಹೆಜ್ಜೆಯಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ